Sunday 9 March 2014

ತಳಸಮುದಾಯಗಳ ಜಾಗೃತಿ- ಜೈ ಭೀಮ್ ಕಾಮ್ರೇಡ್

ತಳಸಮುದಾಯಗಳ ಜಾಗೃತಿ

ಸಹಮತ ವೇದಿಕೆ ಏರ್ಪಡಿಸಿದ ತಳಸಮುದಾಯಗಳ ಪ್ರತಿರೋಧದ ನೆಲೆಗಳು ವಿಚಾರ ಸಂಕಿರಣದಲ್ಲಿ  ಹಳೆಬೀಡಿನ ಗಂಗೂರಿನಲ್ಲಿ ಸವರ್ಣೀಯರಿಂದ ಹಲ್ಲಗೊಳಗಾದ ಭಾಗ್ಯಮ್ಮ ಮಾತನಾಡುತ್ತಿರುವುದು.. 

ವಿಚಾರಸಂಕಿರಣದ ಮುಖ್ಯ ಭಾಷಣಕಾರರಾದ  ಕರ್ನಾಟಕ ಪ್ರಾಂತ ರೈತಸಂಘದ ರಾಜ್ಯಾಧ್ಯಕ್ಷ್ಯರಾದ ಮಾರುತಿ ಮಾನ್ಪಡೆಯವರು  ಭಾಷಣ ಮಾಡುತ್ತಿರುವುದು. 

ಹಾಸನದ ಸಹಮತ ವೇದಿಕೆ ಹಲವು ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ 'ತಳಸಮುದಾಯಗಳ ಪ್ರತಿರೋಧದ ನೆಲೆಗಳು' ಎಂಬ ವಿಚಾರಸಂಕಿರಣವನ್ನು ನಡೆಸಿತು

ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ ಮುಂಬೈನ  ಆನಂದ್ ಪಟವರ್ಧನ್    ಅವರ ಸಾಕ್ಷ್ಯಚಿತ್ರ 'ಜೈ ಭೀಮ್ ಕಾಮ್ರೇಡ್' ಪ್ರೇಕ್ಷಕರ ಮನಕಲಕಿತು. ಮುಂಬೈ ಮಹಾನಗರದ ದಲಿತರ ಹೋರಾಟ, ಬದುಕು, ಕಗ್ಗೊಲೆಗಳು, ರಾಜಕೀಯ ಪಕ್ಷ್ಗಳ ಮುಖಂಡರ ಸಮಯಸಾಧಕತನ, ಜಾತೀಯತೆ, ಕೋಮುವಾದ, ನ್ಯಾಯದಾನದ ಕ್ರೂರ ವ್ಯಂಗ್ಯ- ಹೀಗೆ ಎಲ್ಲಾ ಅಂತರ್ ಸಂಬಂದಿತ ತುಣುಕುಗಳು ಸೇರಿ ಒಂದು ಮಹಾಕೃತಿಯಾಗಿದೆ. ಇದು ಮುಂಬೈನ ಕಥಯಾಗಿರುವಂತೆ ಇಂಡಿಯಾದ ಕಥೆಯೂ ಆಗಿದೆ.

ನಿರಂತರ 14 ವರ್ಷಗಳು  ಒಂದು ಮಹಾಕಾವ್ಯ ನಿರ್ಮಾಣದ ಧ್ಯಾನಸ್ಥ ಸ್ಥಿತಿಯಲ್ಲಿ ಹಗಲು ರಾತ್ರಿಗಳೆನ್ನದೆ, ನೈಜ ಘಟನೆಗಳಿಗೆ, ಕ್ರೂರವಾಸ್ತವಗಳಿಗೆ ಕ್ಯಾಮೆರಾ ಹಿಡಿದ ಪಟವರ್ಧನ್ ಅವರ ಶ್ರಮ ಸಾರ್ಥಕವೆನ್ನಿಸಿದೆ. ಜಾತಿ ವ್ಯವಸ್ಥೆ ವಿರುದ್ದ  ಅಂಬೇಡ್ಕರ್ ಅವರ ಹೋರಾಟ ಮತ್ತು ಜೀವಪರ ಆಶಯಗಳನ್ನು ಆನಂದ್ ಪಟವರ್ಧನ್ ಬಳಗ, ಒಂದು ಸಮರ್ಥವಾದ ಬಿತ್ತಿಯಲ್ಲಿ ಇದನ್ನು ತಂದಿದೆ. ಈ ಕಾರಣಕ್ಕೆ ಈ ದೇಶದಲ್ಲಿ ಬಂದಿರುವ  ಉತ್ಕೃಷ್ಟ ಸಾಕ್ಷ್ಯಚಿತ್ರಗಳ ಪಾಲಿಗೆ ಜೈ ಭೀಮ್ ಕಾಮ್ರೇಡ್ ಚಿತ್ರವೂ ಸೇರುತ್ತದೆ. ಡಾ.ಅಂಬೇಡ್ಕರ್ ಅವರ ದರ್ಶನವನ್ನು ದಾರಿದೀಪವಾಗಿ ಇಟ್ಟುಕೊಂಡಿರುವವರಂತೂ ನೋಡಲೇಬೇಕಾದ ಚಿತ್ರವಿದು.

ರಮಾಬಾಯಿ ಕಾಲೊನಿಯ ಕೊಳಚೆ ಪ್ರದೇಶದಲ್ಲಿ ಚಿತ್ರ ಆರಂಭಗೊಳ್ಳುತ್ತದೆ. ಮುಂಬೈನ ಕೊಳೆತುನಾರುವ ಗಾರ್ಬೇಜನ್ನು ತಂದು ಸುರಿಯುವ ನೂರಾರು ಎಕರೆ ಪ್ರದೇಶಕ್ಕೆ ಆತುಕೊಂಡಂತೆ ಇದೆ ಈ ರಮಾಬಾಯಿ ಕಾಲೊನಿ. ಮಹಾರಾಷ್ಟ್ರದ ವಿಧೆಡೆಗಳಿಂದ ಬಂದ ದಲಿತರು ಹಸಿವಿನ ಕಾರಣಕ್ಕೆ ನಗರದ ಕೊಳಚೆ ಬಳಿಯುವ ಹಂಗಾಮಿ ನೌಕರರಾಗಿದ್ದಾರೆ. ಹೊರ ಊರಿನಿಂದ ಬಂದ ಯುವಕನೊಬ್ಬ ಕಸದ ತೊಟ್ಟಿಯಲ್ಲಿ ಬಿಸಾಕಿದ್ದ ಅನ್ನ ತಿಂದು ಬದುಕುಳಿದ ಪರಿಯನ್ನು ವಿವರಿಸುತ್ತಾನೆ.

ಇಲ್ಲಿ ಹೈಸ್ಕೂಲ್ ವರೆಗೆ ಕಲಿತ ದಲಿತರೂ ಇದ್ದಾರೆ. ತಲೆ ಮೇಲೆ ಮಲಹೊರುವ ಪದ್ದತಿ ಇಲ್ಲಿ ಮತ್ತೊಂದು ರೂಪದಲ್ಲಿ ಅಸ್ತಿತ್ವದಲ್ಲಿದೆ. ಅವರು ವಾರಕ್ಕೊಮ್ಮೆ ಸ್ನಾನಕ್ಕೆ ನೀರು ಸಿಗುವ ಮಾತಿರಲಿ ಕುಡಿಯುವ ನೀರಿಗೂ ಹೋರಾಡಬೇಕಾದ ಪರಿಸ್ಥಿತಿಯಿದೆ. ಕೊಳಚೆಯಲ್ಲಿ ಓಡಾಡಲು ಮತ್ತು ಅದನ್ನು ಶುಚಿಗೊಳಿಸಲು ಕೈಗವಸು ಮತ್ತು ಗಂಬೂಟುಗಳನ್ನು ಕೊಡಬೇಕು ಎಂದು ದಲಿತರು ಸಂಘಟಿತರಾಗಿ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಾರೆ. ಎರಡು ಸಾವಿರ ಕಾರ್ಮಿಕರಿಗೆ ಗಂಬೂಟುಗಳನ್ನು ಕೊಡಬೇಕೆಂದು ಹೈಕೋರ್ಠ ಆದೇಶಿಸುತ್ತದೆ. ದಲಿತರು ತಮ್ಮ ಹಕ್ಕ ಪಡೆದೆವು ಅಂದುಕೊಳ್ಳುತ್ತಿರುವಾಗಲೇ ಅಲ್ಲಿನ ಮುನ್ಸಿಪಾಲಿಟಿ ಈ ಆದೇಶವನ್ನು ಸುಪ್ರಿಕೋರ್ಟನಲ್ಲಿ ಪ್ರಶ್ನಿಸಲು ಹೊರಡುತ್ತದೆ. ಮಾನವತೆ, ವಿವೇಕಗಳು ಸತ್ತು ಯಾಂತ್ರೀಕೃತ ಕಾನೂನುಗಳೇ ಈ ನೆಲವನ್ನು ನಿರ್ದಯವಾಗಿ ಆಳುತ್ತಿರುವ ಪರಿ ಇದು.

ಇಂತಹ ಕಾಲನಿಗಳಲ್ಲಿ ಸ್ವಾತಂತ್ರ್ಯಾ ನಂತರದಿಂದಲೂ ಅಂಬೇಡ್ಕರ್ ಕ್ರಾಂತಿ ವಿಚಾರಗಳನ್ನು ಲಾವಣಿ, ಲಾಲಿ ಹಾಡುಗಳ ಮೂಲಕ ಬಿತ್ತುತ್ತಲೇ ವೃದ್ದರಾಗಿರುವವರು ಇದ್ದಾರೆ. ಇತ್ತೀಚಿನ ವರ್ಷಗಳಲ್ಲಿ ತೆಲುಗು ಕವಿ ಗದ್ದರ್ ಅವರಿಂದ ಸ್ಪೂರ್ತಿ ಪಡೆದ ಯುವ ಕ್ರಾಂತಿಕಾರಿ ಗಾಯಕರುಗಳು ನಿರಂತರ ಜಾಗೈತಿ ಮೂಡಿಸುತ್ತಿದ್ದಾರೆ. ಅಂತಹವರಲ್ಲಿ ಹಾಡುಗಾರ ವಿಲಾಸ್ ಘೋಗ್ರೆ ಮತ್ತು ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವ ಸಂಮೋಹಕ ಭಾಷಣಕಾರ ಭಾಯಿ ಸಂಗರೆಯಂಥಹವರು ಪ್ರಮುಖರು.







ರಮಾಬಾಯಿ ಕಾಲನಿಯಲ್ಲಿರುವ  ಅಂಬೇಡ್ಕರ್ ಪ್ರತಿಮೆಗೆ 1997ರಲ್ಲಿ ಯಾರೋ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕುತ್ತಾರೆ. ಇದರಿಂದ ಕುಪಿತಗೊಂಡ ಸುಮಾರು ಐವತ್ತು ದಲಿತರ ಗುಂಪು ಕಲ್ಲುತೂರಾಟದಲ್ಲಿ ತೊಡಗುತ್ತದೆ. ಅಲ್ಲಿಗೆ ಧಾವಿಸಿ ಬರುವ ಜಾತಿವಾದಿ ಪೋಲೀಸರು ದಲಿತರ ಕಾಲನಿಯತ್ತಲೇ ಉದ್ದೇಶ ಪೂರ್ವಕವಾಗಿ ಬಂದೂಕು ಗುರಿಯಿಟ್ಟು ಹತ್ತು ಅಮಾಯಕ ದಲಿತರನ್ನು ಕೊಲ್ಲುತ್ತಾರೆ. ಗೋಲಿಬಾರ್ ಮಾಡಲು ಮನೋಹರ್ ಕದಂ ಎಂಬ ಕಿರಿಯ ಅಧಿಕಾರಿಯೇ ಆದೇಶಿಸಿರುತ್ತಾನೆ.

ಈ ಹತ್ಯಾಕಾಂಡದ ವಿರುದ್ದ ಮುಂಬೈನಾದ್ಯಂತ ಲಕ್ಷ್ಯಗಟ್ಟಲೇ ದಲಿತರು ಬೀದಿಗಿಳಿಯುತ್ತಾರೆ. ಈ ಹತ್ಯಾಕಾಂಡದ ಕಂಡು ಖಿನ್ನತೆಗೆ ಒಳಗಾಗುವ ವಿಲಾಸ್ ಘೋಗ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅವರು ಅಂಬೇಡ್ಕರ್ ವಾದಿಯಾಗಿ ಸತ್ತರೇ  ಅಥವಾ ಕಮ್ಯೂನಿಷ್ಟ್ ಆಗಿ ಸತ್ತರೇ  ಎಂಬ ಚರ್ಚೆಗಳು ಬುದ್ದಿಜೀವಿ ವಲಯಗಳಲ್ಲಿ ನಡೆಯುತ್ತವೆ. ದಲಿತರ ಹೋರಾಟದ ಕಾವು ಏರುತ್ತಿದ್ದಂತೆ ಆಗ  ಅಧಿಕಾರದಲ್ಲಿದ್ದ ಬಿಜೇಪಿ-ಶಿವಸೇನಾ ಸರ್ಕಾರ ತನಿಖೆಗಾಗಿ ನ್ಯಾಯಮೂರ್ತಿ ಗುಂಡೇವಾರ್ ಆಯೋಗವನ್ನು ರಚಿಸುತ್ತದೆ. ಈ ನಡುವೆ ಹಾಡಹಗಲೇ ಲಕ್ಷ್ಯಾಂತರ ಜನರ ಎದುರಿಗೇ ನಡೆದ ಘಟನೆಯ ಸಾಕ್ಷ್ಯವನ್ನು ತಿರುಚುವ ಪೋಲೀಸರು ಗೋಲಿಬಾರ್ ನಡೆದ ಸ್ಥಳಕ್ಕೆ ಟ್ಯಾಂಕರ್ ವೊಂದನ್ನು ತಂದು ಬೆಂಕಿ ಹಚ್ಚಿ ಪೋಲೀಸರನ್ನು ಕೊಲ್ಲುವ ಯತ್ನದಲ್ಲಿದ್ದಾಗ ಗೋಲಿಬಾರ್ ಅನಿವಾರ್ಯವಾಯಿತು ಎಂದು ಕಥೆ ಕಟ್ಟುತ್ತಾರೆ.

ಈ ಘಟನೆ ನಡೆದ ಮೂರೇ ತಿಂಗಳಲ್ಲಿ ಆಯೋಗದ ವಿಚಾರಣೆಯ ನಡುವೆಯೇ ಕೊಲೆಗಡುಕ ಮನೋಹರ್ ಕದಂಗೆ ಸರ್ಕಾರ ಬಡ್ತಿ ನೀಡುತ್ತದೆ. ಹತ್ತು ವರ್ಷಗಳ ತನಕ ವಿಚಾರಣೆ ನಡೆಸುವ ಆಯೋಗ ಆರೋಪಿ ಕದಂಗೆ ಜೀವಾವಧಿ ಶಿಕ್ಷೆ ನೀಡುತ್ತದೆ. ಪೋಲೀಸ್ ಇಲಾಖೆಯು ಆತನ ಬಗ್ಗೆ ಮರುಕ ಪಡುತ್ತದೆ. ಜೈಲಿಗೆ ಹೋಗಬೇಕಾದ ಕದಂ ಆಸ್ಪತ್ರೆಗೆ ಸೇರುತ್ತಾನೆ.

ಆ ಒಂದು ದಶಕದಲ್ಲಿ ದಲಿತರ ಮತ್ತು ಪ್ರಭುತ್ವದ ನಡುವಿನ ಸಂಘರ್ಷಗಳು, ರಾಜಕೀಯ ಬದಲಾವಣೆಗಳು, ರಾಜಕಾರಣಿಗಳ ಅವಕಾಶವಾದಿತನ,ಅಂಬೇಡ್ಕರ್ ಸಿದ್ದಾಂತಗಳನ್ನು ಉಸಿರಾಗಿಸಿಕೊಂಡವರ ದಿಟ್ಟ ಹೋರಾಟ ಮುಂತಾದ ಘಟನೆಗಳಿಗೆ ಕನ್ನಡಿ ಹಿಡಿದಿರುವ ಆನಂದ್ ಪಟವರ್ಧನ್ ಅದಕ್ಕೆ ಮನೋಜ್ಞ ಚೌಕಟ್ಟನ್ನು ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ದಲಿತ ಚಳವಳಿ ಸಾಂದ್ರವಾಗಿ ಗಟ್ಟಿ ನೆಲೆ ಕಟ್ಟಿಕೊಳ್ಳುತ್ತಲೇ ಪರ್ಯಾಯವಾಗಿ ಮೀಸಲಾತಿ ವಿರೋಧಿ ಚಳವಳಿಯೂ ಭುಗಿಲೇಳುತ್ತದೆ. ಚಿತ್ಪಾವನಾ ಭ್ರಾಹ್ಮಣರು ಸಂಘಟಿತರಾಗಿ ಕ್ಷತ್ರೀಯರನ್ನು ಕೊಂದ ಪರಶುರಾಮನ ಜೀನ್ಸ್ ನಮ್ಮಲ್ಲೂ ಹರಿಯುವುದರಿಂದ ಎಂದುರಾಳಿಗಳನ್ನು ಕೊಲ್ಲಲೂ ಹೇಸುವುದಿಲ್ಲ  ಎಂದು ಅಬ್ಬರಿಸುತ್ತಾರೆ.

 ಮುಂಬೈ ಕೋಮುಗಲಭೆಗಳಿಗೆ  ಶಿವಸೇನೆ ಬಾಳಠಾಕ್ರೆ ಕಾರಣ  ಎಂದು ನ್ಯಾಯಮೂರ್ತಿ ಶ್ರೀಕೃಷ್ಣ   ಆಯೋಗ ಹೇಳುತ್ತದೆ. ಇದಕ್ಕೆ ಬಹಿರಂಗ ಸಭೆಯಲ್ಲಿ ಪ್ರತಿಕ್ರಿಯಿಸುವ  ಠಾಕ್ರೆ, ಒಂದು ಜನಾಂಗವನ್ನೇ ನಿರ್ಮೂಲನೆ ಮಾಡಿ ಎಂದು ತನ್ನ ಜನರಿಗೆ ಕರೆಕೊಟ್ಟು ನಿರುದ್ಯೋಗಿ ಕೋರ್ಟ ಗಳು ಆಮೇಲೆ ವಿಚಾರಣೆ ನಡೆಸಿಕೊಳ್ಳಲಿ, ನನ್ನನ್ನು ಬಂದಿಸಿದರೆ ಮುಂಬೈ ಹತ್ತಿ ಉರಿಯುತ್ತದೆ. ತಾಕತ್ತಿದ್ದರೆ ನ್ಯಾಯಮಾರ್ತಿ ಮುಂಬೈಗೆ ಬರಲಿ, ಅವರನ್ನೇ ಕಾರ್ಯಕರ್ತರು ಬೆಂಕಿಗೆಸೆಯುತ್ತಾರೆ ಎಂದು ಬೆಂಕಿಯುಗುಳುತ್ತಾನೆ.

ಛಾವಾ ಎಂಬ ಹಿಂದು ಸಂಘಟನೆಯೊಂದು ಮರಾಠಿಗರಿಗೆ ಮೀಸಲಾತಿ ನೀಡದಿದ್ದರೆ ಕಗ್ಗೊಲೆಗಳನ್ನು ನಡೆಸುವುದಾಗಿ ಅಬ್ಬರಿಸುತ್ತದೆ. ಈ ಎಲ್ಲಾ ಕಣ್ಣಿಗೆ ರಾಚುವ ನೈಜ ಘಟನೆಗಳನ್ನು ನೋಡುತ್ತಿದ್ದರೆ ದೇಶದಲ್ಲಿ ಸಂವಿಧಾನ ಅಸ್ಥಿತ್ವದಲ್ಲಿದೆಯೇ ಎಂಬ ಅನುಮಾನಗಳು ಮೂಡುತ್ತವೆ.

ಜಾಗತಿಕರಣ, ಜಾತಿವಾದದ ವಿರುದ್ದ ದಲಿತ ಶೂದ್ರಾತಿಶೂದ್ರರ ಹಕ್ಕುಗಳ ರಕ್ಷಣೆಗೆ ಶಿತಲ್ ಸಾಠೆ ಎಂಬ ಸಿಡಿಲ ಬೆಳಕಿನ ಹೆಣ್ಣುಮಗಳು ಸಾಂಸ್ಕೃತಿಕ ಸಂಘರ್ಷವನ್ನು ಸಾರುತ್ತಾರೆ. ಅವರು ಪ್ರತಿನಿಧಿಸುವ ಕಬೀರ್ ಕಲಾಮಂಚ್ ಪ್ರಭುತ್ವದ ನೀಚತನಗಳನ್ನು ಬಯಲುಗೊಳಿಸುವುದರೊಂದಿಗೆ ಸಂವಿಧಾನ ರಕ್ಷಣೆಯ ಬಗ್ಗೆ ಜನಜಾಗೃತಿ ಮೂಡಿಸುತ್ತದೆ.  ನಿಜ ಕೊಲೆಗಡುಕರನ್ನು ಮುಟ್ಟಲಾಗದ ಪೋಲೀಸರು ಆಕೆ ಮತ್ತು ಸಕಚರರಿಗೆ ನಕ್ಸಲೈಟ್ ಪಟ್ಟ ಕಟ್ಟಿ ಜೈಲಿಗೆ ತಳ್ಳುವ ಯೋಜನೆ ರೂಪಿಸುತ್ತಾರೆ. ಇದರಿಂದ ಭೂಗತರಾಗುವ ಶಿತಲ್ ಮತ್ತು ಅವರ ಸಹಚರ ಕಲಾವಿದರು ಈವರೆಗೆ ಪತ್ತಯಾಗಿಲ್ಲ.

ಜಾತಿವ್ಯವಸ್ಥಯ ರೂವಾರಿ ಮನವಿನ ಸ್ಮೃತಿಯನ್ನು ಸುಟ್ಟು ನವಸಮಾಜ ನಿರ್ಮಾಣಕ್ಕೆ ಕರೆಕೊಡುತ್ತಾ ಲಕ್ಷ್ಯಾಂತರ ದಲಿತರ ಎದೆಯಲ್ಲಿ ಸ್ಪೂರ್ತಿಯ ಸೆಲೆಯಾಗಿದ್ದ   ಭಾಯಿ ಸಂಗರೆ ಮನೆಗೆ ಬೆಂಕಿ ಬೀಳುತ್ತದೆ. ಸರ್ಕಾರ ಸೂಕ್ತ ಚಿಕಿತ್ಸೆ ಮುಂದಾಗದೇ ಸುಟ್ಟಗಾಯಗಳಿಂದ ಭಾಯಿ ಸಂಗರೆ ಸಾವನ್ನಪ್ಪುತ್ತಾರೆ.

ಆ ಒಂದು ದಶಕದ ಘಟನೆಯನ್ನು ಆಧರಿಸಿ ಮೂರು ತಲೆಮಾರಿನ ಮನಸ್ಸುಗಳು  ಅವುಗಳ ಪರಿವರ್ತನೆಗಳನ್ನು ಅತ್ಯಂತ ಸೂಕ್ಷ್ಮ ನೆಲೆಗಳಲ್ಲಿ ಆನಂದ್ ಪಟವರ್ಧನ್ ಕಟ್ಟಿಕೊಡುತ್ತಾರೆ. ಮೈಸೂರಿನ ಪ್ರೋ. ವಿ ಎನ್ ಲಕ್ಷ್ಮಿನಾರಾಯಣ್ ತುಂಬು ಅರ್ಥಪೂರ್ಣ ಭಾವಾನುವಾದದ ಸಬ್ ಟೈಟಲ್ ನೀಡಿದ್ದಾರೆ.

ದಲಿತ ಛಳವಳಿ ರೂಪಿಸಬೇಕಾದ ಇಂತಹ ಗಂಬೀರ ಕಾರ್ಯಕ್ರಮವನ್ನು ಸಹಮತ ವೇದಿಕೆಯ  ಐವಾನ್ ಡಿಸಿಲ್ವ ಮತ್ತು ಸತೀಷ್ ರೂಪಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು.



-ಎಸ್.ಕೆ ಸತೀಷ್ ಕುಮಾರ್

ಕೃಪೆ -  ಅಗ್ನಿ  ವಾರಪತ್ರಿಕೆ 

Monday 3 March 2014

ತಳಸಮುದಾಯಗಳ ಪಪ್ರತಿರೋಧದ ನೆಲೆಗಳು ಮತ್ತು 'ಜೈ ಭೀಮ್ ಕಾಮ್ರೇಡ್' ಸಾಕ್ಷ್ಯಚಿತ್ರ ಪ್ರದರ್ಶನ

ಸಹಮತ ವೇದಿಕೆ ಹಾಸನ ಮಾರ್ಚ 2ನೇ ತಾರರೀಕು ಭಾನುವಾರ ದಂದು ಹಾಸನದ ಸ್ವಾಭಿಮಾನಿ ಭವನದಲ್ಲಿ  " ತಳಸಮುದಾಯಗಳ ಪ್ರತಿರೋದದ ನೆಲೆಗಳು" ಎಂಬ ವಿಚಾರದ ಬಗ್ಗೆ ವಿಚಾರಸಂಕಿರಣವನ್ನು  ಹಾಗೂ ಮದ್ಯಾಹ್ನದ ಮೇಲೆ ಆನಂದ್ ಪಟವರ್ಧನ್ ರವರ "ಜೈ ಭೀಮ್ ಕಾಮ್ರೇಡ್" ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಂವಾದವನ್ನು ಏರ್ಪಡಿಸಿತ್ತು.

ವಿಚಾರಸಂಕಿರಣದಲ್ಲಿ  ಹಾಸನದ ದಲಿತ ಸಂಘರ್ಷ ಸಮಿತಿಯ ಪ್ರಮೀಳಾ ಕೆ ಎಸ್. ಉಪನ್ಯಾಸಕಿ , ಹಾಸನ ಜಿಲ್ಲೆಯ ಬಿವಿಎಸ್ ಮುಖಂಡರೂ ವಕೀಲರೂ ಆದ ೆಮ್ ಎಸ್ ಯೋಗೀಶ್ ಮತ್ತು ಕರ್ನಾಟಕ ಪ್ರಾಂತ ರೈತಸಂಘದ ರಾಜ್ಯ ಅಧ್ಯಕ್ಷ್ಯರಾದ ಮಾರುತಿ ಮಾನ್ಪಡೆಯವರು ಭಾಗವಹಿಸದ್ದರು.
ಇತ್ತೀಚೆಗೆ ಹಾಸನದ ಬಳಿಯ ಹಳೆಬೀಡಿನ ಗಂಗೂರಿನಲ್ಲಿ ಸವರ್ಣಿಯರಿಂದ ಹಲ್ಲೆಗೋಳಗಾಗಿದ್ದ ಭಾಗ್ಯಮ್ಮ ತಮ್ಮ ಅನುಭವವನ್ನು ಹಂಚಿಕೊಂಡರು.
ಮದ್ಯಾಹ್ನದ      ಬಳಿಕ ಆನಂದ್ ಪಟವರ್ಧನ್ ರವರ "ಜೈ ಭೀಮ್ ಕಾಮ್ರೇಡ್" ಸಾಕ್ಷ್ಯಚಿತ್ರ ಪ್ದರ್ಶಿಸಲಾಯಿತು. ಸಾಕ್ಷ್ಯಚಿತ್ರದ ಬಗ್ಗೆ ಮೈಸೂರಿನ ಪ್ರೋ. ವಿ ಎನ್ ಲಕ್ಞ್ಮಿನಾರಾಯಣ ಮತ್ತು ಬೆಂಗಳೂರಿನ ಕವಿ ಚಿಂತಕ ಲಕ್ಷ್ಮಿಪತಿ ಕೋಲಾರ ಸಂವಾದ ನಡೆಸಿಕೊಟ್ಟರು.


 ವಿಚಾರ ಸಂಕಿರಣದ ಕೆಲವು ದೃಶ್ಯಾವಳಿಗಳು ತಮಗಾಗಿ........
ಸಂಕಿರಣದಲ್ಲಿ ಮಾರುತಿ ಮಾನ್ಪಡೆ ಮತ್ತು ಪ್ರೋ ವಿ ಎನ್ ಲಕ್ಷ್ಮಿನಾರಾಯಣ್

ಸವರ್ಣಿಯರಿಂದ ಹಲ್ಲಗೊಳಗಾಗಿದ್ದ ಹಳೆಬೀಡಿನ ಗಂಗೂರಿನ ಭಾಗ್ಯಮ್ಮ ಮತ್ತು ಸಂಗಡಿಗರು

ಕರ್ನಾಟಕ ಪ್ರಂತ ರೈತಸಂಘದ ರಾಜ್ಯ ಻ಧ್ಯಕ್ಷ್ಯರು ಮತ್ತು ಹಾಸನ ಜಿಲ್ಲಾಧ್ಯಕ್ಷ್ಯರು ನವೀನ್

ಪ್ರಮೀಳಾ ಕೆ ಎಸ್ ಕೊಟ್ಟೂರು ಶ್ರೀನಿವಾಸ್ ಜತೆ ಲಕ್ಷ್ಮಿನಾರಾಯಣ್

ಕೆಜೆವಿಎಸ್ ನ ಕೊಟ್ಟೂರು ಶ್ರೀನಿವಾಸ್  ಕಾರ್ಯಕ್ರಮ ನಿರ್ವಹಣೆ..

ಎಸ್ ಎಫ್ ಐ ಜಿಲ್ಲಾಧ್ಯಕ್ಷ್ಯ ಆಂಶದ್ ಸ್ವಾಗತ

Add caption

ಸಹಮತ ವೇದಿಕೆಯ ಭಾರತಿದೇವಿ ಸ್ವಾಗತ ಗೀತೆ..


ತಳಸಮುದಾಯಗಳ ಮಹಿಳೆಯರ ಪ್ರತಿರೋದಗಳ ಕುರಿತು ಪ್ರಮೀಳಾ ಕೆ ಎಸ್ ವಿಷಯ ಮಂಡನೆ..





ವೇದಿಕೆಯಲ್ಲಿ. ಭಾಗ್ಯಮ್ಮ, ಮಾರುತಿ ಮಾನ್ಪಡೆ ಮತ್ತು ಎಮ್ ಎಸ್ ಯೋಗೀಶ್
 

ಎಮ್ ಎಸ್ ಯೋಗೀಶ್ ವಿಷಯ ಮಂಡನೆ..

 






ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ್ಯ ನಾಗರಾಜ್ ಹೆತ್ತೂರ್ ಮತ್ತು ಸುಪುತ್ರಿ ನಕ್ಷತ್ರ





ಹಳೆಬೀಡಿನ ಗಂಗೂರಿನ  ದಲಿತ ನಾಯಕಿ ಭಾಗ್ಯಮ್ಮ
 





ವಿಷಯ   ಆಲಿಸುತ್ತಿರುವ ಆರ್ ಪಿ ಐ ಸತೀಷ್.

ಪ್ರೇರಣಾವಿಕಾಸ ಟ್ರಸ್ಟ್ ನ ರೂಪಾ ಹಾಸನ ಮತ್ತು ಸಂಗಡಿಗರು
 
ಸಿಪಿಎಮ್ ನ ಧರ್ಮೇಶ್   ಮತ್ತಿತರರು.
 

ಮಾರುತಿ ಮಾನ್ಪಡೆ ವಿಷಯ ಮಂಡನೆ.
 

ಗಹನದಿಂದ ವಿಷಯ ಗ್ರಹಿಸುತ್ತಿರುವ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ್ಯ ನವೀನ್.


ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷ್ಯ ಅಹಮದ್ ಹಗರೆ.

ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಗೋಪಾಲಕ್ರೃಷ್ಣ
 





ಕೃಷ್ಣ ಕಾನೂನು ಕಾಲೇಜಿನ   ಪ್ರಾಧ್ಯಾಪಕ  ಶ್ರೀನಿವಾಸ್. 



ಜೈ ಭೀಮ್ ಕಾಮ್ರೇಡ್ ಚಿತ್ರ ಪ್ರದರ್ಶನ